Type Here to Get Search Results !

Famous Proverb in kannada - Kannada Gadegalu - ಗಾದೆಮಾತು - ಭಾಗ 3

 Famous Proverb in kannada - Gadematugalu in kannada - ಗಾದೆಮಾತು - ಭಾಗ 3

Table of content(toc)


This blog consist  proverb in kannada with stories and kannada gadegalu with explanation in kannada.

This will defientely helpful for school student project and elders can get motivated.


Kannada gadegalu :

ಕೂತು ಉಣ್ಣುವವನಿಗೆ ಕೊಪ್ಪರಿಗೆ ಹಣ ಸಾಲದು

''ನನ್ನಲ್ಲಿ ಬೇಕಾದಷ್ಟು ದುಡ್ಡಿದೆ. ನಾನೇಕೆ ಕೆಲಸ ಮಾಡಬೇಕು. ಹಾಯಾಗಿ ಇದ್ದುಬಿಡುತ್ತೇನೆ''  ಎಂದುಕೊಳ್ಳುವ ಜನರೂ ನಮ್ಮ ಮಧ್ಯೆ ಇರುತ್ತಾರೆ. ಅವರು ತಮ್ಮಲ್ಲಿರುವ ಹಣವನ್ನು ಖರ್ಚು ಮಾಡುತ್ತಾ ಹೋಗುತ್ತಾರೆ. ಕ್ರಮೇಣ ಹಣವು ಕಡಿಮೆಯಾಗುತ್ತಾ ಹೋಗುತ್ತದೆ. ಕೊನೆಗೊಂದು ದಿನ ಮುಗಿದೇಹೋಗುತ್ತದೆ. ಯಾವುದೇ ಕೆಲಸ ಮಾಡದೆ ಅಂದರೆ ಯಾವುದೇ ಸಂಪಾದನೆ ಮಾಡದೆ ಸದಾ ಉಣ್ಣುತ್ತಿರುವವನಿಗೆ ಕೊಪ್ಪರಿಗೆ ತುಂಬಾ ಹಣ ವಿದ್ದರೂ ಅದು ಸಾಲುವುದಿಲ್ಲ. ಒಂದಲ್ಲ ಒಂದು ದಿನ ಅದು ಮುಗಿದೇ ಹೋಗುತ್ತದೆ. ದುಡಿಯದೆ, ಹಣ ಸಂಪಾದನೆ ಮಾಡದೆ ಸೋಮಾರಿಯಾಗಿ ಜೀವನ ನಡೆಸುವವರಿಗೆ ಈ ಗಾದೆಯು ಅನ್ವಯವಾಗುತ್ತದೆ.

ಒಂದು ಪೈಸೆಯನ್ನೂ ಸಂಪಾದನೆ ಮಾಡದೆ ಕೂತು ಉಣ್ಣುತ್ತಾ ಹೋದರೆ ಹಣವು ಖಾಲಿಯಾಗದೇ ಇರಲು ಸಾಧ್ಯವೇ? ಹೀಗೆ ಕೂತು ಉಣ್ಣುವವನ ಬಳಿಯಲ್ಲಿ ಹಣ ಎಷ್ಟಿದ್ದರೇನು? ಕೊನೆಗೊಂದು ದಿನ “ಅಯ್ಯೋ, ನನ್ನ ಬಳಿ ಒಂದು ನಯಾಪೈಸೆಯೂ ಇಲ್ಲ, ಖರ್ಚಿಗೇನು ಮಾಡಲಿ??” ಎಂದು ಅವನು ಚಡಪಡಿಸುತ್ತಾನೆ.

ಸೋಮಾರಿಯಾಗಿ ಕಾಲ ಕಳೆಯುತ್ತಾ, ತಿಂದು ಉಂಡು, ಮೋಜು, ಮಜಾ ಮಾಡುವವರ ಬಳಿಯಲ್ಲಿ ಕೊಪ್ಪರಿಗೆಯಷ್ಟು ಹಣವಿದರೂ ಕೊನೆಗೊಂದು ದಿನ ಅವರಿಗೆ ಸಾಲದೇ ಹೋಗುತ್ತದೆ. ಇದೇ 'ಕೂತು ಉಣ್ಣುವವನಿಗೆ ಕೊಪ್ಪರಿಗೆ ಹಣ ಸಾಲದು' ಎಂಬ ಗಾದೆಯ ತಿರುಳು.

ಗಾದೆಗೊಂದು ಕತೆ :

ಅಂದು ರಾಜು ಶಾಲೆಯಿಂದ ಮನೆಗೆ ಬಂದಾಗ ಅಪ್ಪ-ಅಮ್ಮ ಇಬ್ಬರೂ ಆಫೀಸಿನಿಂದ ಬಂದಿರಲಿಲ್ಲ, ಅವರಿಗಾಗಿ ಕಾದೂ ಕಾದೂ ರಾಜುವಿಗೆ ಸುಸ್ತಾಗಿ ಹೋಯಿತು.
ಅಪ್ಪ-ಅಮ್ಮ ಬಂಡ ತಕ್ಷಣ ರಾಜು ಸಿಡುಕಿದ.
 ''ಯಾಕೆ ಇಷ್ಟು ತಡವಾಗಿ ಮನೆಗೆ ಬರ್ತೀರಿ ?'' ಎಂದು ಕೋಪದಿಂದ ಕೇಳಿದ.
 “ಆಫೀಸಿನಲ್ಲಿ ತುಂಬಾ ಕೆಲಸ ಇತ್ತಪ್ಪ. ಅದಕ್ಕೇ ತಡವಾಯ್ತು'' ಎಂದರು ಅಮ್ಮ.
'ನಮ್ಮ ಬಳಿ ಬೇಕಾದಷ್ಟು ದುಡ್ಡು ಇರುತ್ತಿದೆ ಹೀಗೇ ಕಷ್ಟಪಟ್ಟು ಕೆಲಸ ಮಾಡಬೇಕಿತ್ತಾ? ಮನೆಯಲ್ಲೇ ಹಾಯಾಗಿ ಇರಬಹುದಿತ್ತು' ಎಂದನು ರಾಜು. ರಾಜುವಿನ ಅಪ್ಪ ನಕ್ಕರು.
'ಕೂತು ಉಣ್ಣುವವನಿಗೆ ಕೊಪ್ಪರಿಗೆ ಹಣ ಸಾಲದು. ದುಡಿಯದೆ ಉಣ್ಣುತ್ತಾ ಇದ್ದರೆ ಎಷ್ಟು ಹಣವಿದ್ದರೂ ಅದು ಸಾಲದೆ ಹೋಗುತ್ತದೆ'' ಎಂದರು ಅಪ್ಪ.
“ ಅದೇಗೆ? ರಾಶಿರಾಶಿ ದುಡ್ಡಿದೆ, ಅಷ್ಟು ಬೇಗನೆ ಮುಗಿಯುತ್ತಾ?'' ಕೇಳಿದ ರಾಜು.
ಅದಕ್ಕೆ ನಮ್ಮ ಎದುರು ಗುಡಿಸಲಿನ ವಿನೋದನೆ ದೊಡ್ಡ ಉದಾಹರಣೆ ಎಂದರು ಅಪ್ಪ,
'ಹೌದೇ? ವಿನೋದನ ಕಥೆ ಏನದು? ಹೇಳಿ ಅಪ್ಪಾ...' ರಾಜು ಗೋಗರೆದ. ಅಪ್ಪ ಕಥೆ ಹೇಳಲಾರಂಭಿಸಿದರು.

ಆ ಊರಿನಲ್ಲಿ ಚಂದ್ರಪ್ಪ ಎನ್ನುವ ದೊಡ್ಡ ಸಾಹುಕಾರನಿದ್ದನು. ಅವನು ಆ ಊರಿಗೇ ದೊಡ್ಡ ಶ್ರೀಮಂತನಾಗಿದ್ದನು. ಅವನಿಗೆ ನಾಲ್ಕಾರು ದೊಡ್ಡ ಅಂಗಡಿಗಳಿದ್ದವು. ವ್ಯಾಪಾರವೂ ಚನ್ನಾಗಿತ್ತು, ಚಂದ್ರಪ್ಪನು ದುಡ್ಡಿನ ಮೇಲೆ ದುಡ್ಡು ಕೂಡಿಡುತ್ತಾ ಹೋದನು.
ಚಂದ್ರಪ್ಪನ ಮುದ್ದಿನ ಮಗನೇ ವಿನೋದ. ಅವನನ್ನು ಚಂದ್ರಪ್ಪ ಬಹಳ ಮುದ್ದಿನಿಂದ ಸಾಕುತ್ತಿದ್ದನು.
“ನೀನು ಯಾಕೆ ಕಷ್ಟಪಟ್ಟು ಓದಬೇಕು? ಯಾಕೆ ಕಷ್ಟಪಟ್ಟು ದುಡಿಯಬೇಕು? ನಾನು ಇಲ್ಲವೇ? ನಾನು ನಿನಗೆ ಬೇಕಾದಷ್ಟು ದುಡ್ಡು ಕೂಡಿಟ್ಟಿದ್ದೇನೆ. ನೀನು ಒಂದಿಷ್ಟೂ ಕಷ್ಟ ಪಡದೆ ಇಡೀ ಜೀವನವನ್ನು ಸಂತೋಷದಿಂದ ಕಳೆಯುವಂತಾಗಬೇಕು. ಅದೇ ನನ್ನಾಸೆ'' ಎಂದು ಚಂದ್ರಪ್ಪನು ವಿನೋದನಲ್ಲಿ ಹೇಳುತ್ತಿದ್ದನು.
ವಿನೋದನು ಹಾಗೆಯೇ ಬೆಳೆದನು. ನಟ್ಟಗೆ ವಿದ್ಯೆಯನ್ನೂ ಕಲಿಯಲಿಲ್ಲ. ಕಷ್ಟಪಟ್ಟು ಕೆಲಸ ಮಾಡಲೂ ಅವನಿಗೆ ಗೊತ್ತಿರಲಿಲ್ಲ, ಒಂದು ದಿನ ಚಂದ್ರಪ್ಪನು ಕಾಯಿಲೆಯಿಂದ ತೀರಿಕೊಂಡನು.
ವಿನೋದನಿಗೆ ವ್ಯಾಪಾರ ಮಾಡುವುದು ತಿಳಿದಿರಲಿಲ್ಲ, ಅಂಗಡಿಯಲ್ಲಿರುವ ಸಾಮಾನುಗಳನ್ನೆಲ್ಲ ಯಾರೋ ದೋಚಿಕೊಂಡು ಹೋದರು. ಆದರೂ ವಿನೋದ ಬೇಸರಪಡಲಿಲ್ಲ. ತಂದೆ ಕೂಡಿಟ್ಟ ದುಡ್ಡು ಮನೆಯಲ್ಲಿ ಬೇಕಾದಷ್ಟಿತ್ತು ಅದನ್ನು ಖರ್ಚು ಮಾಡುತ್ತಾ ಮೋಜು...ಮಜಾ ಮಾಡುತ್ತಾ ಹಾಯಾಗಿ ಕಾಲ ಕಳೆದನು. ದಿನದಿಂದ ದಿನಕ್ಕೆ ತಂದೆ ಕೂಡಿಟ್ಟ ಹಣದ ಗಂಟು ಕರಗುತ್ತಿತ್ತು, ಕೊನೆಗೊಂದು ದಿನ ಖಾಲಿಯಾಗಿಯೇ ಹೋಯಿತು.
ಈವರೆಗೂ, ಅವನಿಗೆ ಕಷ್ಟಪಟ್ಟು ಕೆಲಸ ಮಾಡಿ ಅಭ್ಯಾಸ ವಿರಲಿಲ್ಲ, ಹಾಗಾಗಿ ಸಾಲ ಮಾಡಿ ಹಣ ತಂದನು. ವರ್ಷಗಳೇ ಕಳೆದರೂ ಸಾಲದ ಹಣವನ್ನು ವಾಪಸು ಮಾಡಲಿಲ್ಲ. ಸಾಲ ಕೊಟ್ಟವರು ಬಂದು ಅವನ ಮನೆಯನ್ನೇ ವಶಪಡಿಸಿಕೊಂಡರು. ಅವನನ್ನು ಮನೆಯಿಂದ ಓಡಿಸಿಬಿಟ್ಟರು.
“ವಿನೋದ ಈಗ ಗುಡಿಸಲಲ್ಲಿ ಇರುತ್ತಾನೆ. ಈಗಲೂ ಅವನಿಗೆ 
ದುಡಿಯಲು ಇಷ್ಟವಿಲ್ಲ, ಭಿಕ್ಷೆ ಬೇಡಿ ಬದುಕುತ್ತಾನೆ. ಕೂತು ಉಣ್ಣುವವನಿಗೆ ಕೊಪ್ಪರಿಗೆ ಹಣ ಸಾಲದು ಎಂಬುದು ವಿನೋದನಿಗೂ ಚಂದ್ರಪ್ಪನಿಗೂ ತಿಳಿಯದೇ ಹೋಯಿತು. ಅದರ ಅರ್ಥ ತಿಳಿದಿರುತ್ತಿದ್ದರೆ ವಿನೋದನು ಇಂದು ಚಂದ್ರಪ್ಪನಂತೆ ಬಾಳುತ್ತಿದ್ದನು. ಸಮಾಜದಲ್ಲಿ ಅವನಿಗೆ ಗೌರವವೂ ಇರುತ್ತಿತ್ತು' ಎಂದರು ರಾಜುವಿನ ಅಪ್ಪ.
"ಹೌದಪ್ಪ. ನೀನು ಹೇಳಿದ್ದೆಲ್ಲ ಅರ್ಥವಾಯಿತು. ಇನ್ನು ಮುಂದೆ ಹೀಗೆಲ್ಲಾ ಕೋಪ ಮಾಡಿಕೊಳ್ಳಲ್ಲ'' ಎಂದನು ರಾಜು.

ದೂರದ ಬೆಟ್ಟ ನುಣ್ಣಗೆ

ದೂರದಿಂದ ನೋಡುವಾಗ ಬೆಟ್ಟ, ಪರ್ವತಗಳು ನುಣ್ಣಗೆ, ಸುಂದರವಾಗಿ ಕಾಣಿಸುತ್ತವೆ. ಅದನ್ನು ನೋಡಿ ಆಹಾ! ಎಷ್ಟು ಚೆನ್ನಾಗಿದೆ!ಎಂದುಕೊಳ್ಳುತ್ತೇವೆ. ಆದರೆ ಹತ್ತಿರ ಹೋಗಿ ನೋಡಿದಾಗ ಸತ್ಯದ ಅರಿವಾಗುತ್ತದೆ. 

ಬೆಟ್ಟದ ತುಂಬಾ ಬರೀ ಒರಟು ಕಲ್ಲುಗಳು, ಮುಳ್ಳುಗಳು, ಗಿಡಗಂಟಿಗಳೇ ಕಂಡುಬರುತ್ತವೆ. ಒಂದು ಹೆಜ್ಜೆ ಮುಂದಿಡ ಬೇಕಾದರೂ ಎಚ್ಚರವಹಿಸಬೇಕಾಗುತ್ತದೆ. ಎಡವದಂತೆ ಸಾವರಿಸಿಕೊಂಡು ನಡೆಯಬೇಕಾಗುತ್ತದೆ. ಹಾಗೆಯೇ ಜೀವನ ಕೂಡ. ದೂರದಿಂದ ನೋಡುವಾಗ  “ಆದಷ್ಟು ಚನ್ನ! ಹಾಗಿದ್ದರೆಷ್ಟು ಚನ್ನ!” ಎಂದುಕೊಳ್ಳುತ್ತೇವೆ. ಹತ್ತಿರದಿಂದ ನೋಡಿದಾಗಲಷ್ಟೇ ನಮಗೆ ಬದುಕಿನ ಕಷ್ಟ-ಸುಖ ತಿಳಿಯುವುದು; ಅಲ್ಲಿನ ಸಮಸ್ಯೆಗಳ ಅರಿವಾಗುವುದು. ನಮಗೆ ಬೇರೆ ಜನರ ಉದ್ಯೋಗ, ಬದುಕು ಎಲ್ಲವೂ ಸುಂದರವಾಗಿಯೇ ಕಾಣಿಸುತ್ತದೆ. ಆದರೆ, ಆ ಜನರ ಜಾಗದಲ್ಲಿ ನಿಂತು ನೋಡಿದಾಗ ಅಥವಾ ಅದನ್ನು ಅನುಭವಿಸಿದಾಗ ನಿಜವಾದ ಕಷ್ಟ ಏನೆಂಬುದು ನಮಗೆ ಅರ್ಥವಾಗುತ್ತದೆ. ಹೀಗೆ ಹೊರನೋಟಕ್ಕೆ ಕಾಣುವುದನ್ನು 'ಸುಂದರ' ಎಂದು ತಿಳಿದು ಕೊಳ್ಳುವುದಕ್ಕೆ 'ದೂರದ ಬೆಟ್ಟ ನುಣ್ಣಗೆ' ಎನ್ನುತ್ತೇವೆ.

ಗಾದೆಗೊಂದು ಕಥೆ:

 ಒಂದು ಬೆಟ್ಟದ ಮೇಲೆ ಒಂದು ಪುಟ್ಟ ರಾಜ್ಯವಿತ್ತು. ಆ ರಾಜ್ಯವನ್ನು ಒಬ್ಬ ರಾಜನು ಆಳುತ್ತಿದ್ದನು. ಆ ರಾಜ್ಯದ ಸುತ್ತಲೂ ಎತ್ತರವಾದ ಕೋಟೆಯನ್ನು ಕಟ್ಟಲಾಗಿತ್ತು ಶತ್ರುಗಳು ಕೋಟೆಯ ಒಳಗೆ ಪ್ರವೇಶಿಸದಂತೆ ಹಗಲೂ-ರಾತ್ರಿ ಕಾವಲುಗಾರರು ಕಾವಲು ಕಾಯುತ್ತಿದ್ದರು.
ಕೋಟೆಯ ಹತ್ತಿರದಲ್ಲಿಯೇ ವಾಸವಾಗಿದ್ದ ಕಾಳಯ್ಯನೂ ಒಬ್ಬ ಕಾವಲುಗಾರನಾಗಿದ್ದನು. ಕೋಟೆಯ ಮೇಲಿನ ಬುರುಜಿನಲ್ಲಿ ನಿಂತುಕೊಂಡು, ಅವನು ಇಡೀ ರಾತ್ರಿ ಕಾವಲು ಕಾಯುತ್ತಿದ್ದನು. ಸೂರ್ಯ ಉದಯಿಸಿದ ಮೇಲೆ ಕೋಟೆಯಿಂದ ಕೆಳಗಿಳಿದು ಮನೆಗೆ ಬರುತ್ತಿದ್ದನು. ಸ್ನಾನ, ತಿಂಡಿ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದನು. ಸಂಜೆಯ ಹೊತ್ತು ಪುನಃ ಕೋಟೆಯ ಕಾವಲಿಗೆ ಹೊರಡುತ್ತಿದ್ದನು.

ಕಾಳಯ್ಯನ ಮನೆಯ ಪಕ್ಕದಲ್ಲಿಯೇ ಮುತ್ತಯ್ಯ ಎಂಬುವನ ಮನೆ ಇತ್ತು ಯಾವಾಗಲೂ ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವ ಕಾಳಯ್ಯನನ್ನು ಕಂಡು ಮುತ್ತಯ್ಯನು ಗೇಲಿ ಮಾಡಿ ನಗುತ್ತಿದ್ದನು. “ಲೋ ಕಾಳ, ನಿನ್ನದು ಬಹಳ ಆರಾಮದ ಕೆಲಸವಪ್ಪ, ಹಗಲಿಡೀ ಭರ್ಜರಿ ನಿದ್ದೆ! ಭಾರೀ ಸುಖದ ಜೀವನ! ರಾತ್ರಿಯ ಹೊತ್ತು ಕೋಟೆಯ ಬುರುಜಿನಲ್ಲಿ ನಿಂತರೆ ಆಯು ಎಷ್ಟು ಸುಲಭ ಕೆಲಸ. ಹೀಗೆ ಹಗಲು ಹೊತ್ತಲ್ಲಿ ನಿದ್ದೆ ಮಾಡೋಕೆ ನಾಚಿಕೆ ಆಗಲ್ವಾ ನಿಂಗೆ?'' ಎನ್ನುತ್ತಿದ್ದನು ಮುತ್ತಯ್ಯ.

“ನೀನೂ ಒಂದು ಬಾರಿ ನನ್ನೊಂದಿಗೆ ಕೋಟೆಗೆ ಬಾ. ಆವಾಗ ಗೊತ್ತಾಗುತ್ತೆ ನಿಜ ಏನೂ ಅಂತ....” ಎಂದು ಒಂದು ದಿನ ಕಾಳಯ್ಯನು ಹೇಳಿದನು. 'ಓಹೋ! ಅದಕ್ಕೇನು? ಇವತ್ತೇ ಬರ್ತೀನಿ ' ಎಂದು ಹೇಳಿದ ಮುತ್ತಯ್ಯ. ನೆನಪಿಡು, ಇಡೀ ರಾತ್ರಿ ನೀನು ನನ್ನೊಂದಿಗೆ ಇರಬೇಕು'' ಎಂದ ಕಾಳಯ್ಯ, ಮುತ್ತಯ್ಯ ಅದಕ್ಕೆ ಒಪ್ಪಿದ.

ಆ ರಾತ್ರಿ ಊಟ ಮುಗಿಸಿ ಕಾಳಯ್ಯನ ಜೊತೆಯಲ್ಲಿ ಮುತ್ತಯ್ಯನೂ ಕೋಟೆಯ ಮೇಲೆ ನಿಂತ. ಕಾಳಯ್ಯ ಮಾತಾಡದೆ ಎಚ್ಚರದಿಂದ ಸುತ್ತಲೂ ಗಮನಿಸತೊಡಗಿದ. ಯಾವ ಕಾವಲುಗಾರರೂ ಪರಸ್ಪರ ಮಾತಾಡುತ್ತಿರಲಿಲ್ಲ, ಮೌನವಾಗಿ ಅತ್ತ ಇತ್ತ ಅಡ್ಡಾಡುತ್ತಾ ಸುತ್ತಲೂ ನೋಡುತ್ತಿದ್ದರು.

ಮುತ್ತಯ್ಯನಿಗೆ ಬೇಸರವಾಗತೊಡಗಿತು. ಅವನು ಕಾಳಯ್ಯನ ಜೊತೆಯಲ್ಲಿ ಅದೂ-ಇದೂ ಮಾತಾಡತೊಡಗಿದ. “ಶ್!.... ಮಾತಾಡಬೇಡ! ದೊರೆಗಳಿಗೆ ಗೊತ್ತಾದ್ರೆ ಸಿಗಿದುಹಾಕ್ತಾರೆ. ಕಾವಲು ಕಾಯುವ ಸಮಯದಲ್ಲಿ ವಿನಾ ಕಾರಣ ಮಾತಾಡುವಂತಿಲ್ಲ' ಎಂದ ಕಾಳಯ್ಯ.

ಬರೀ ಕತ್ತಲು. ಊರಿಡೀ ಮಲಗಿತ್ತು ಎಲ್ಲಿಯೂ ಒಂದು ಸದ್ದೂ ಕೇಳಿಸುತ್ತಿರಲಿಲ್ಲ. ಚಳಿಗಾಳಿ ಸುಂಯ್ ಎಂದು ಬೀಸುತ್ತಿತ್ತು. ಮುತ್ತಯ್ಯನಿಗೆ ಚಳಿಯಿಂದ ಗಡಗಡನೆ ನಡುಗುವಂತಾಯಿತು. ಯಾಕಾದರೂ ಬಂದೆನೋ ಎಂದುಕೊಂಡ ಆತ.
'ತುಂಬಾ ಚಳಿ. ಇಲ್ಲಿ ಬೆಂಕಿ ಹಾಕಿಕೊಂಡು ಚಳಿ ಕಾಯಿಸಿಕೊಳ್ಳಲಾ?” ಎಂದು ಮುತ್ತಯ್ಯ ಕಾಳಯ್ಯನ ಬಳಿ ಕೇಳಿದ.
ಭ “ಬೇಡ ಮುತ್ತಯ್ಯ. ನೀನಿಲ್ಲಿ ಬೆಂಕಿ ಹಾಕಿದ್ರೆ, ನಾವು ಇಲ್ಲಿದ್ದೀವಿ ಅಂತ ಶತ್ರುಗಳಿಗೆ ಗೊತ್ತಾಗುತ್ತೆ' ಎಂದ ಕಾಳಯ್ಯ.
ಮುತ್ತಯ್ಯನಿಗೆ ಏನು ಮಾಡಲೂ ತೋಚಲಿಲ್ಲ. ಕಣ್ಣಲ್ಲಿ ನಿದ್ದೆ ಎಳೆದುಕೊಂಡು ಬರುತ್ತಿತ್ತು, ಅಲ್ಲಿಯೇ, ಬುರುಜಿನ ಬುಡದಲ್ಲಿಯೇ ತನ್ನ ಹೆಗಲ ಮೇಲಿದ್ದ ಶಾಲನ್ನು ನೆಲದ ಮೇಲೆ ಹಾಸಿಕೊಂಡು ಮಲಗಿದ. ನಿದ್ದೆಯೂ ಬಂದಿತು.
'ಏಯ್ ಮುತ್ತಯ್ಯಾ, ಬೆಳಗಾಯ್ತು ಏಳೋ, ನನ್ನ ಕೆಲಸ ಮುಗಿಯಿತು. ಮನೆಗೆ ಹೋಗೋಣ' ಎಂದು ಕಾಳಯ್ಯ ನುಡಿದಾಗಲೇ ಮುತ್ತಯ್ಯನಿಗೆ ಎಚ್ಚರವಾಗಿದ್ದು.

ಮುತ್ತಯ್ಯ ಕಣ್ಣುಜ್ಜಿಕೊಂಡು ಎದ್ದು ಕುಳಿತ. 'ನನ್ನನ್ನು ಕ್ಷಮಿಸು ಕಾಳಯ್ಯ, ನಿನ್ನ ಕೆಲಸ ಬಹಳ ಸುಲಭದ್ದು, ಆರಾಮದ್ದು ಎಂದು ಭಾವಿಸಿದ್ದೆ. ನಿನ್ನನ್ನು ಕಂಡು ನಗುತ್ತಿದ್ದೆ. ನೀನು ಎಷ್ಟು ಶ್ರಮವಹಿಸಿ ನಿದ್ದೆಗೆಟ್ಟು ಕೆಲಸ ಮಾಡುತ್ತೀಯಾ ಎಂಬುದು ಈಗ ಅರ್ಥವಾಯಿತು ಬಿಡು'' ಎಂದನು ಮುತ್ತಯ್ಯ.

ಕಾಳಯ್ಯ ಜೋರಾಗಿ ನಕ್ಕನು. “ಹೌದು. ದೂರದ ಬೆಟ್ಟ ನುಣ್ಣಗೆ ಅಂತ ಅದಕ್ಕೇ ಹೇಳೋದು. ಬೆಟ್ಟದಲ್ಲಿ ಕಲ್ಲು ಮುಳ್ಳು ಗಳಿರುತ್ತವೆ ಅಂತೆ ಹತ್ತಿರ ಹೋದಾಗಲೇ ಗೊತ್ತಾಗೋದು. ಅನುಭವಿಸಿದ ಮೇಲೇನೇ ಕಷ್ಟ ಏನೆಂದು ಅರ್ಥವಾಗೋದು'' ಎಂದ ಕಾಳಯ್ಯ.

Proverb in kannada

ಬೆಳ್ಳಗಿರುವುದೆಲ್ಲ ಹಾಲಲ್ಲ

ಹಾಲಿನ ಬಣ್ಣ ಬಿಳಿ. ಹಾಗೆಯೇ ಇತರ ಹಲವಾರು ವಸ್ತುಗಳ ಬಣ್ಣವೂ ಬಿಳಿ. ಬರಿಯ ಬಿಳಿಯ ಬಣ್ಣದ ದ್ರವವನ್ನು ನೋಡಿ ಇದು 
ಹಾಲು ಎಂದು ತಿಳಿದುಕೊಳ್ಳುವುದು ತಪ್ಪು. ಬಿಳಿಯ ಬಣ್ಣದ್ದೆಲ್ಲವೂ ಹಾಲು ಆಗಿರುವುದಿಲ್ಲ, ಹಾಗೆಯೇ, ಪ್ರಪಂಚದಲ್ಲಿ ಬಗೆ ಬಗೆಯ ಜನರು ಇರುತ್ತಾರೆ. ಒಳ್ಳೆಯವರು, ಕೆಟ್ಟವರು, ಪ್ರಾಮಾಣಿಕರು, ವಂಚಕರು, ಸುಳ್ಳುಗಾರರು - ಹೀಗೇ ಥರ ಥರದ ಜನರೊಡನೆ ನಾವು ವ್ಯವಹರಿಸಬೇಕಾಗುತ್ತದೆ. ಎಲ್ಲರನ್ನೂ ನಂಬುವಂತಿಲ್ಲ. ಒಬ್ಬ ಅಪರಿಚಿತ ವ್ಯಕ್ತಿಯ ಮುಖ ನೋಡಿದಾಗ ಆತ ಪ್ರಾಮಾಣಿಕನೋ, ವಂಚಕನೋ ಎಂದು ಗೊತ್ತಾಗುವುದಿಲ್ಲ, ನಯವಾಗಿ ಮಾತಾಡಿ, ಆಮೇಲೆ ಮೋಸ ಮಾಡುವವರೂ ಇರುತ್ತಾರೆ. ಆಪರಿಚಿತ ವ್ಯಕ್ತಿಯನ್ನು ಎಂದೂ ನಂಬಬಾರದು. ಆತ ಹೇಳಿದಂತೆ ಕೇಳ ಬಾರದು. ನಾವು ಎಚ್ಚರಿಕೆಯಿಂದ ಇದ್ದರೆ ಮಾತ್ರ ಯಾರಿಂದಲೂ ಮೋಸ ಹೋಗಲಾರವು. ಸಾಚಾ ವ್ಯಕ್ತಿಗಳಂತ ಹೊರನೋಟಕ್ಕೆ ಕಾಣುವವರೂ ಕೆಲವೊಮ್ಮೆ ಸಾಚಾ ವ್ಯಕ್ತಿಗಳಾಗಿರುವುದಿಲ್ಲ. ಅದಕ್ಕೆ ಅನ್ನುತ್ತಾರೆ – “ಬೆಳ್ಳಗಿರುವುದೆಲ್ಲ ಹಾಲಲ್ಲ'' ಎಂದು.

ಗಾದೆಗೊಂದು ಕತೆ :

ಎರಡು ಬೆಟ್ಟಗಳ ನಡುವೆ ಒಂದು ಪುಟ್ಟ ಹಳ್ಳಿ ಇತ್ತು, ಅಲ್ಲಿ ತಿಮ್ಮ ಎನ್ನುವ ಯುವಕನು ತನ್ನ ತಂದೆ ತಾಯಂದಿರ ಜೊತೆಯಲ್ಲಿ ವಾಸಿಸುತ್ತಿದ್ದನು.
ತಂದೆ-ತಾಯಿ ಹೇಳಿದ ಕೆಲಸಗಳನ್ನಷ್ಟೇ ಮಾಡುತ್ತಿದ್ದನು. ತಂದೆಯು 'ಹೋಗಿ ದನಗಳನ್ನು ಮೇಯಿಸಿ ಕೊಂಡು ಬಾ'' ಎಂದರೆ ದನಗಳನ್ನು ಮೇಯಿಸಿಕೊಂಡು ಬರುತ್ತಿದನು. ಅವನು
ತಾಯಿಯು, 'ಹೋಗು ತಿಮ್ಮ ತರಕಾರಿ ಗಿಡಗಳಿಗೆ ನೀರುಣಿಸು. ಹಾಗೆಯೇ ಬರುವಾಗ ತರಕಾರಿಗಳನ್ನು ಕೊಯ್ದು ತಾ?' ಎಂದು ಹೇಳಿದರೆ, ಆ ಕೆಲಸವನ್ನು ಮಾಡುತ್ತಿದ್ದನು.
ತಂದೆ-ತಾಯಿ ಹೇಳದಿದ್ದರೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ತಾನಾಗಿಯೇ ಯಾವ ಕೆಲಸವನ್ನೂ ಮಾಡಲು ಹೋಗುತ್ತಿರಲಿಲ್ಲ.
'ತಿಮ್ಮನು ಹೀಗೆ ಮನೆಯಲ್ಲಿಯೇ ಇದ್ದರೆ, ಯಾವ ಕೆಲಸ ಮಾಡಲೂ ಅವನಿಗೆ ತಿಳಿಯಲಾರದು. ಅವನು ತಾನೇ ತಾನಾಗಿ ಕೆಲಸಗಳನ್ನು ಮಾಡಿಕೊಳ್ಳುವಂತಾಗಬೇಕು. ಜನರೊಡನೆ ಹೇಗೆ ಮಾತಾಡಬೇಕು, ಹೇಗೆ ಬೆರೆಯಬೇಕು ಎಂಬುದು ಅವನಿಗೆ ತಿಳಿಯುವಂತಾಗಬೇಕು' ಎಂದು ಒಂದು ದಿನ ತಿಮ್ಮನ ತಂದೆ-ತಾಯಿ ಮಾತಾಡಿಕೊಂಡರು.

ಮರುದಿನವೇ, ತಂದೆಯು ತಿಮ್ಮನನ್ನು ಬಳಿಗೆ ಕರೆದನು - 'ನೋಡು ತಿಮ್ಮಾ, ಇವತ್ತು ನೀನು ಸಂತೆಗೆ ಹೋಗಬೇಕು. ಈ ಎರಡು ಮೇಕೆಗಳನ್ನು ತೆಗೆದುಕೊಂಡು ಹೋಗು. ಅವುಗಳನ್ನು ಮಾರಿ ಬಂದ ಹಣದಿಂದ ಎರಡು ಮೂಟೆ ಅಕ್ಕಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.

“ಸರಿ ಅಪ್ಪಾ, ಸಂತೆಗೆ ಹೋಗಿ ವ್ಯಾಪಾರ ಮಾಡಿ ಬರುತ್ತೇನೆ'' ಎಂದು ಹಿಗ್ಗಿನಿಂದ ತಿಮ್ಮನು ಹೇಳಿದನು.
“ಹುಷಾರಾಗಿರು ತಿಮ್ಮಾ! ಅಲ್ಲಲ್ಲಿ ಮೋಸಗಾರರಿರುತ್ತಾರೆ, ಕಳ್ಳರಿರುತ್ತಾರೆ. ನೀನು ಮೋಸ ಹೋಗಬೇಡ. ಅಲ್ಲಿ-ಇಲ್ಲಿ ಸುತ್ತೋಕೆ ಹೋಗಬೇಡ, ವ್ಯಾಪಾರ ಮುಗಿಸಿ ಅಕ್ಕಿಮೂಟೆಯೊಂದಿಗೆ ನೇರವಾಗಿ ಮನೆಗೆ ಬಾ, ಜಾಗರೂಕನಾಗಿರು'' ಎಂದು ತಿಮ್ಮನ ತಂದೆ-ತಾಯಿ ಹಲವಾರು ಬಾರಿ ಎಚ್ಚರಿಕೆ ನೀಡಿದರು.

ತಿಮ್ಮನು ಎಲ್ಲದಕ್ಕೂ ತಲೆ ಆಡಿಸಿದನು. ಮೇಕೆಗಳೊಂದಿಗೆ ಸಂತೆಗೆ ಹೋದನು. ಸಂತೆಯಲ್ಲಿ ಸಹಸ್ರಾರು ಜನರಿದ್ದರು. ಬಗೆ 
ಬಗೆಯ ವ್ಯಾಪಾರ ಮಾಡುತ್ತಿದ್ದರು. ಒಂದೆಡೆ, ತರಕಾರಿ, ಹಣ್ಣುಗಳನ್ನು ರಾಶಿ ರಾಶಿಯಾಗಿ ಹಾಕಲಾಗಿತ್ತು, ಇನ್ನೊಂದು ಕಡೆ ತಿಂಡಿ, ಸಿಹಿತಿಂಡಿಗಳ ಮಾರಾಟ ನಡೆಯುತ್ತಿತ್ತು ಮತ್ತೊಂದು ಕಡೆಯಲ್ಲಿ ಹೂವು, ಬಳೆ, ಕುಂಕುಮ - ಹೀಗೆ ಹತ್ತು ಹಲವು ಬಗೆಯ ಸಾಮಾನುಗಳನ್ನು ಮಾರುತ್ತಿದ್ದರು. ಜನರು ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುತಿದ್ದರು. ನಿಮ್ಮ ಎಲ್ಲಿಗೆ ಹೋಗುವುದೆಂದು ತಿಳಿಯದೆ ಮಿಕಿಮಿಕಿ ನೋಡಿದನು.

ಮೇಕೆ ಮಾರಲು ಬಂದೆಯೇನೋ ತಮ್ಮಾ, ಹೋಗು, ಅಲ್ಲಿ ಮರದ ಕೆಳಗೆ ನಿಂತ್ತೋ, ಯಾರಾದ್ರೂ ಕೊಂಡುಕೊಳ್ಳೋಕೆ ಬಾರೆ'' ಎಂದು ಒಬ್ಬ ಅಜ್ಜಿಯು ಹೇಳಿದಳು.
ತಿಮ್ಮನು ಮೇಕೆಗಳನ್ನು ಹಿಡಿದುಕೊಂಡು ಮರದ ಕೆಳಗೆ ಕುಳಿತನು. ಸ್ವಲ್ಪ ಹೊತ್ತಿನಲ್ಲಿ ಇಬ್ಬರು ಯುವಕರು ತಿಮ್ಮನ ಬಳಿಗೆ ಬಂದರು.
'ಏನಪ್ಪಾ, ಮೇಕೆಗಳನ್ನು ಮಾರಲು ಬಂದಿದ್ದೀಯಾ?” ಎಂದು ಆ ಯುವಕರು ತಿಮ್ಮನಲ್ಲಿ ಕೇಳಿದರು.
“ಹೌದು. ಎರಡು ಅಕ್ಕಿ ಮೂಟೆಗಳನ್ನು ಕೊಟ್ಟರೆ ಮಾತ್ರ ನಾನು ಈ ಮೇಕೆಗಳನ್ನು ಕೊಡ್ತೀನಿ'' ಎಂದನು ತಿಮ್ಮ
“ಹೌದೇ? ನಾವು ನಾಲ್ಕು ಅಕ್ಕಿ ಮೂಟೆಗಳನ್ನು ಕೊಡ್ತೀವಿ. ನಮಗೆ ಮೇಕೆಗಳನ್ನು ಕೊಡುವೆಯಾ?” ಎಂದು ಒಬ್ಬ ಯುವಕನು ಕೇಳಿದನು.
ತಿಮ್ಮನಿಗೆ ಸಂತೋಷವಾಯಿತು.
"ಅಬ್ಬಾ! ಎಂಥ ಸೆಕೆ? ನನಗಂತೂ ತುಂಬಾ ದಾಹ! ನಿಂಗೂ ದಾಹವೇ?'' ಎಂದು ಇನ್ನೊಬ್ಬ ಯುವಕನು ತಿಮ್ಮನಲ್ಲಿ ಕೇಳಿದನು.
ತಿಮ್ಮನಿಗೂ ಬಹಳ ಬಾಯಾರಿಕೆಯಾಗುತ್ತಿತ್ತು, ಆದರೆ ಈ ಮೇಕೆಗಳನ್ನು ಬಿಟ್ಟು ಹೇಗೆ ಹೋಗಲಪ್ಪಾ ಎಂದು ಯೋಚಿಸಿದನು. “ನೀನೇನೂ ಯೋಚನೆ ಮಾಡಬೇಡ. ನಾನು ನಿನ್ನ ಗೆಳೆಯನಂತೆ ಎಂದು ತಿಳಿದುಕೊ, ಹೋಗು, ಅವನೊಂದಿಗೆ ತಂಪಾದ ಷರಬತ್ತು ಕುಡಿದು ಬಾ. ನಾನು ನಿನ್ನ ಮೇಕೆಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತೇನೆ' ಎಂದು ಆ ಯುವಕ ಹೇಳಿದನು.
ತಿಮ್ಮನಿಗೆ ಆ ಇಬ್ಬರು ಯುವಕರ ಮೇಲೆ ನಂಬಿಕೆ ಹುಟ್ಟಿತು. ಅವನು ಒಬ್ಬ ಯುವಕನ ಜೊತೆಯಲ್ಲಿ ಷರಬತ್ತು ಕುಡಿಯಲು ಹೊರಟನು. ಇನ್ನೊಬ್ಬ ಯುವಕನು ಮೇಕೆಗಳನ್ನು ಹಿಡಿದುಕೊಂಡು ಮರದ ಕೆಳಗೆ ಕುಳಿತನು.
“ಕುಡಿ, ಬೇಕಾದಷ್ಟು ಕುಡಿ. ಇನ್ನೂ ಒಂದು ಲೋಟ ಕುಡಿ' ಎನ್ನುತ್ತಾ ಆ ಯುವಕನು ತಿಮ್ಮನಿಗೆ ಬೇಕಾದಷ್ಟು ಷರಬತ್ತನ್ನು ಕುಡಿಸಿದನು.

“ನೋಡು, ನಾಲ್ಕು ಅಕ್ಕಿ ಮೂಟೆಗಳನ್ನು ನಿನ್ನಿಂದ ಹೊತ್ತುಕೊಡು ಹೋಗಲು ಸಾಧ್ಯವೇ? ನಾವು ಅವನ್ನೆಲ್ಲ ಎತ್ತಿನ ಗಾಡಿಯಲ್ಲಿ ನಿನ್ನ ಮನೆಗೆ ಕಳುಹಿಸಿಕೊಡುತ್ತೇವೆ. ಆಗದೇ? ನಿನ್ನ ಮನೆ ಎಲ್ಲಿದೆ ಎಂದು ತಿಳಿಸು'' ಎಂದು ಆ ಯುವಕನು ಹೇಳಿದನು. ತಿಮ್ಮ ಸಂತೋಷದಿಂದ ಮನೆಯ ದಾರಿ ತಿಳಿಸಿದನು. ನಂತರ ಯುವಕನು ಎಲ್ಲಿಗೋ ಹೊರಟು ಹೋದನು.
ತಿಮ್ಮನು, ಮೇಕೆಗಳನ್ನು ಹಿಡಿದುಕೊಂಡಿದ್ದ ಯುವಕನ ಬಳಿಗೆ ಬಂದನು. “ನಾನು ಮೇಕೆಗಳನ್ನು ಕೊಂಡೊಯ್ಯುತ್ತೇನೆ. ನೀನು | ನೇರವಾಗಿ ಮನೆಗೆ ಹೋಗು. ಅಕ್ಕಿ ಮೂಟೆಗಳನ್ನು ಗಾಡಿಯಲ್ಲಿ ಹಾಕಿ ಕಳುಹಿಸಿ ಕೊಡುತ್ತೇವೆ' ಎಂದು ಆತನೂ ಹೇಳಿದನು; ತಿಮ್ಮ ಮರುಮಾತಿಲ್ಲದೆ ತಲೆ ಆಡಿಸಿದನು. ಯುವಕನು ಮೇಕೆಗಳನ್ನು ತೆಗೆದುಕೊಂಡು ಹೊರಟುಹೋದನು.
ತಿಮ್ಮನು ಸಂತೋಷದಿಂದ ಮನೆಗೆ ಮರಳಿದನು.
'ಅಪ್ಪಾ, ಮೇಕೆಗಳನ್ನು ಮಾರಿದ್ದಕ್ಕೆ ನನಗೆ ನಾಲ್ಕು ಅಕ್ಕಿ ಮೂಟೆಗಳು ಸಿಕ್ಕಿವೆ. ನೀನು ತಿಳಿಸಿದಂತೆ ಎರಡು ಅಲ್ಲ, ವ್ಯಾಪಾರಿಗಳು ಬಹಳ ಒಳ್ಳೆಯವರು. ನನ್ನ ದಾಹ ತಣಿಸಿದರು. ನನಗೆ ಷರಬತ್ತು ಕೊಟ್ಟರು'' ಎಂದು ಉತ್ಸಾಹದಿಂದ ಹೇಳಿದನು. ತಂದೆಗೆ ಅನುಮಾನವಾಯಿತು.
“ಎಲ್ಲಿವೆ ಅಕ್ಕಿ ಮೂಟೆಗಳು? ಯಾರು ಅವರು?'' ಎಂದು ಕೇಳಿದನು.
'ಎತ್ತಿನ ಗಾಡಿಯಲ್ಲಿ ಕಳುಹಿಸಿ ಕೊಡುತ್ತಾರಂತೆ' ಎಂದ ತಿಮ್ಮ .
ತಿಮ್ಮ ಮೋಸ ಹೋಗಿದ್ದಾನೆ ಎಂಬುದು ಆತನ ತಂದೆಗೆ ತಿಳಿಯಿತು.
“ನೀನು ಮೋಸಹೋದೆ ತಿಮ್ಮ, ಯಾರೋ ವಂಚಕರು ಮೇಕೆಗಳನ್ನು ಒಯ್ದಿದ್ದಾರೆ. ಅಕ್ಕಿಯೂ ಇಲ್ಲವಾಯ್ತು! ಬೆಳ್ಳಗಿರುವುದೆಲ್ಲಾ ಹಾಲಲ್ಲ! ಎಲ್ಲರನ್ನೂ ಎಂದಿಗೂ ನಂಬಬೇಡ. ಕೆಲವರು ನೋಟಕ್ಕೆ ಒಳ್ಳೆಯವರಂತೆ ತೋರಿಸಿಕೊಳ್ಳುತ್ತಾರೆ. ಆಮೇಲೆ ಮೋಸ ಮಾಡುತ್ತಾರೆ. ಇಂದು ಮೋಸ ಹೋದಂತೆ, ಇನ್ನು ಮುಂದೆ ಎಂದೂ ಮೋಸ ಹೋಗಬೇಡ ತಿಳಿಯಿತೇ?'' ಎಂದು ತಿಮ್ಮನ ತಂದೆಯು ಬುದ್ದಿ ಹೇಳಿದನು. ತಿಮ್ಮನು ಪೆಚ್ಚಾಗಿ ತಲೆ ಆಡಿಸಿದನು.

kannada gadegalu with explanation in kannada

ಹಾಸಿಗೆ ಇದ್ದಷ್ಟು ಕಾಲು ಚಾಚು

ಹಾಸಿಗೆ ಎಷ್ಟು ಉದ್ದವಾಗಿದೆಯೋ ಅಷ್ಟೇ ಕಾಲು ಚಾಚಲು ಸಾಧ್ಯ. ನಮ್ಮಲ್ಲಿ ಎಷ್ಟು ಹಣವಿದೆಯೋ ಅದಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಕೈಗೆ ಸ್ವಲ್ಪ ಹಣವು ಸಿಕ್ಕಿದ ತಕ್ಷಣ ಕಂಡ ಕಂಡ ಸಾಮಾನುಗಳನ್ನು ಕೊಳ್ಳಬಾರದು. ಮನ ಬಂದಂತೆ ಖರ್ಚು ಮಾಡಬಾರದು. ಹಾಗೆ ಮಾಡಿದರೆ, ನಾಳೆಯ ಊಟಕ್ಕೂ ಹಣವಿರುವುದಿಲ್ಲ, ಅತಿ ಅಗತ್ಯದ ವಸ್ತುಗಳಿಗೆ ಸಾಕಷ್ಟು ಹಣವನ್ನು ಉಳಿಸಬೇಕು. ನಮ್ಮ ಬಳಿ ಹಣ ಎಷ್ಟಿದೆ ಎಂದು ನೋಡಿಕೊಂಡು ಅದಕ್ಕೆ ತಕ್ಕಂತೆ ಜೀವನ ನಡೆಸಬೇಕು. ಅದಕ್ಕೇ ನಮ್ಮ ಹಿರಿಯರು 'ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂದಿರುವುದು.

ಗಾದೆಗೊಂದು ಕತೆ :

ಹೇಮಪುರ ಎನ್ನುವ ಪಟ್ಟಣದಲ್ಲಿ ಸುಮತಿ ಎನ್ನುವ ಹೆಂಗಸು ವಾಸಿಸುತ್ತಿದ್ದಳು. ಆಕೆಯ ಪತಿ ಶಿವಣ್ಣ ವ್ಯಾಪಾರಕ್ಕಾಗಿ ಊರಿನಿಂದ ಹೊರಗೆಯೇ ಇರುತ್ತಿದ್ದನು. ತಿಂಗಳಿಗೆ ಒಂದು ಬಾರಿ ಊರಿಗೆ ಬಂದು ಮನೆಯ ಖರ್ಚಿಗೆ ದುಡ್ಡು ಕೊಟ್ಟು ಹೋಗುತ್ತಿದ್ದನು.
ಸುಮತಿಗೆ ಇಬ್ಬರು ಮಕ್ಕಳಿದ್ದರು. ಮನೆಯಲ್ಲಿ ವಯಸ್ಸಾದ ಅತ್ತೆ ಇದ್ದಳು. ಅವರೆಲ್ಲರನ್ನೂ ಸುಮತಿಯು ನೋಡಿಕೊಳ್ಳಬೇಕಾಗಿತ್ತು, ಮನೆಯ ಖರ್ಚನ್ನು ಸರಿತೂಗಿಸಿಕೊಂಡು ಹೋಗಬೇಕಾಗಿತ್ತು,
ಸುಮತಿಗೆ ಎದುರು ಮನೆಯ ಸಾಹುಕಾರನ ಹೆಂಡತಿ ಮಹಾಲಕ್ಷ್ಮಿ ಯ ಮೇಲೆಯೇ ಕಣ್ಣು, ಅವಳು ರೇಷ್ಮೆ ಸೀರೆ ಉಟ್ಟುಕೊಂಡರೆ, ಸುಮತಿಯು ಅದಕ್ಕಿಂತಲೂ ಬೆಲೆಬಾಳುವ ಸೀರೆಯನ್ನುಕೊಳ್ಳುತ್ತಿದ್ದಳು. ಅದನ್ನು ಉಟ್ಟುಕೊಂಡು ಅವಳ ಮನೆಗೆ ಹೋಗುತ್ತಿದ್ದಳು. ಮಹಾಲಕ್ಷ್ಮಿಯು ಹೊಸ ಹೊಸ ಒಡವೆಗಳನ್ನು, ಮನೆ ಸಾಮಾನುಗಳನ್ನು ಕೊಂಡರೆ ಸಾಕು; ಸುಮತಿಯೂ ಹಿಂದೆ-ಮುಂದೆ ಯೋಚಿಸದೆ, ಅವುಗಳಿಂದಲೂ ಹೆಚ್ಚು ಬೆಲೆಯ ಒಡವೆ, ಸಾಮಾನುಗಳನ್ನು ಕೊಂಡು ತರುತ್ತಿದ್ದಳು.

“ಸುಮತೀ, ಯಾಕೆ ಇಷ್ಟೊಂದು ಖರ್ಚು ಮಾಡ್ತಾ ಇದ್ದೀಯಾ? ಶಿವಣ್ಣ ದುಡ್ಡು ಕೊಟ್ಟು ಹೋಗಿ ಇನ್ನೂ ನಾಲ್ಕು ದಿನಗಳೂ ಆಗಿಲ್ಲ. ನೀನು ಈಗ್ಲೆ ದುಡ್ಡು ಮುಗಿಸಿದ್ರೆ ಹೇಗೆ? ಮಕ್ಕಳ ಶಾಲೆಯ ಖರ್ಚು, ಮನೆಯ ಖರ್ಚು ಹೇಗೆ ನಿಭಾಯಿಸೋದು?” ಎಂದು ಒಂದು ದಿನ ಸುಮತಿಯ ಅತ್ತೆಯು ಹೇಳಿದಳು.
ಇನ್ನೊಂದು ತಿಂಗಳಲ್ಲಿ ಅವು ಬಂದು ದುಡ್ಡು ಕೊಡ್ತಾರಲ್ಲ ಅತ್ತೇ. ಅಲ್ಲೀವರೆಗೂ ಅಲ್ಲಿ-ಇಲ್ಲಿ ಸಾಲ ಮಾಡಿದ್ರಾಯ್ತು' ಎಂದಳು. ಸುಮತಿ.
ಇರುವ ದುಡ್ಡಲ್ಲೇ ಸರಿತೂಗಿಸಿಕೊಂಡು ಹೋಗ್ಬೇಕು ಸುಮತೀ. ನಮ್ಮಲ್ಲಿ ಎಷ್ಟು ದುಡ್ಡಿದೆ ಎಂದು ನೋಡಿಕೊಂಡು ಆಷ್ಟು ಮಾತ್ರ ಖರ್ಚು ಮಾಡಬೇಕು. ಶಿವಣ್ಣ ಎಷ್ಟು ದುಡ್ಡು ತಾನೋ ಅಷ್ಟು ಮಾತ್ರ ನಾವು ಖರ್ಚು ಮಾಡಬಹುದಷ್ಟೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಕಣೆ'' ಎಂದು ಅತ್ತ ಹೇಳಿದಾಗ ಸುಮತಿಗೆ ತುಂಬಾ ಕೋಪಬಂದಿತು.

“ಅದೆಲ್ಲಾ ನಂಗೊತ್ತಿಲ್ಲ ಅತ್ತೇ, ಆ ಸಾಹುಕಾರನ ಹೆಂಡತಿ ಮಹಾಲಕ್ಷ್ಮಿ ಯ ಹಾಗೆಯೇ ನಾನೂ ಇರಬೇಕು. ನಾನೂ ಅವಳಂತೆ ಝಗಮಗಿಸುವ ಬಟ್ಟೆ ತೊಡಬೇಕು; ಬಗೆ ಬಗೆಯ ಒಡವೆ ಹಾಕಿಕೊಳ್ಳಬೇಕು ಅದೇ ನನ್ನಾಸೆ. ನಾನೂ ಅವಳಂತಯೇ ಇದ್ದೀನಿ'' ಎಂದಳು ಸುಮತಿ.
ಹೀಗೆ, ಅಂಗಡಿಯಲ್ಲಿ ಕಂಡ ಕಂಡ ಸಾಮಾನುಗಳನ್ನು ಸುಮತಿಯು ಕೊಂಡುಕೊಳ್ಳುತ್ತಲೇ ಹೋದಳು. ಶಿವಣ್ಣ ಸುಮತಿಯ ಕೈಗೆ ಕೊಟ್ಟ ದುಡ್ಡು ಒಂದು ವಾರದಲ್ಲಿಯೇ ಮುಗಿದು ಹೋಯಿತು. ಮನೆಯ ಖರ್ಚಿಗಾಗಿ ಸುಮತಿಯು ಸಾಲ ತಂದಳು. ಇನ್ನೊಂದು ತಿಂಗಳಲ್ಲಿ ಗಂಡ ಬಂದ ತಕ್ಷಣ ಸಾಲ ತೀರಿಸುತ್ತೇನೆಂದು ಮಾತು ಕೊಟ್ಟಳು, ಬಗೆ ಬಗೆಯ ಸಾಮಾನುಗಳನ್ನು ಕೊಂಡು ಆ ಸಾಲದ ಹಣವನ್ನೂ ಮುಗಿಸಿಬಿಟ್ಟಳು.

ಕೆಲವು ದಿನಗಳು ಕಳೆದ ಬಳಿಕ ಶಿವಣ್ಣನು ಮನೆಗೆ ಮರಳಿ ಬಂದನು. ಅವನಿಗೆ ಈ ಬಾರಿ ವ್ಯಾಪಾರದಲ್ಲಿ ನಷ್ಟ ಉಂಟಾಗಿತ್ತು, ಹಾಗಾಗಿ, ಬರಿಗೈಲಿ ಮನೆಗೆ ಬಂದಿದ್ದನು. ''ಸ್ವಲ್ಪವೂ ಹಣ ತಂದಿಲ್ಲವೇ? ನೀವು ಬಂದ ಮೇಲೆ ಹಣ ಕೊಡುತ್ತೇನೆಂದು ಹೇಳಿ ಹಲವಾರು ಕಡೆ ಸಾಲ ಮಾಡಿದ್ದೀನಿ'' ಎಂದು ಸುಮತಿಯು ಹೇಳಿದಳು. 'ಕಳೆದ ಬಾರಿ ಎಷ್ಟೊಂದು ದುಡ್ಡು ಕೊಟ್ಟಿದ್ದೆ! ಅದೆಲ್ಲಾ ಏನಾಯಿತು? ಯಾರನ್ನು ಕೇಳಿ ಸಾಲ ಮಾಡಿದೆ?'' ಎಂದು ಶಿವಣ್ಣನು ಸುಮತಿಯನ್ನು ಗದರಿದನು.

ಮರುದಿನ ಸಾಲ ಕೊಟ್ಟ ಜನರು ಸುಮತಿಯು ಮನೆಗೆ ಬಂದರು. ಸಾಲದ ಹಣವನ್ನು ವಾಪಸ್ ಕೊಡಿ ಎಂದು ಕೇಳಿದರು.
“ಸಂಜೆಯ ಹೊತ್ತಿಗೆ ಹಣ ಕೊಟ್ಟರೆ ಸರಿ. ಇಲ್ಲವಾದರೆ ಪೊಲೀಸರಿಗೆ ದೂರು ಕೊಡ್ತೀವಿ'' ಎಂದು ಎಚ್ಚರಿಕೆ ನೀಡಿ ಹೊರಟುಹೋದರು.

ಸುಮತಿಗೆ ಭಯವಾಯಿತು. ಏನು ಮಾಡುವುದು ಎಂದು ತೋಚದೆ ಅಳಲಾರಂಭಿಸಿದಳು.
“ಈಗ ಯಾಕೆ ಅಳುತ್ತಿದ್ದೀಯಾ? ನಿನ್ನ ಒಡವೆಗಳನ್ನೆಲ್ಲ ಈಚೆ ಕೊಡು. ಅವನ್ನು ಮಾರಿ ಹಣವನ್ನು ಮರಳಿಸುತ್ತೇನೆ. ಇನ್ನು ಮುಂದೆಯಾದರೂ ಯೋಚನೆ ಮಾಡಿ ಹಣ ಖರ್ಚು ಮಾಡು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ತಿಳಿಯಿತೇ?'' ಎಂದನು ಶಿವಣ್ಣ
ಸುಮತಿಯು ಅಳುತ್ತಾ ತಾನು ಹೊಸದಾಗಿ ಕೊಂಡಿದ್ದ ಒಡವೆಗಳನ್ನಲ್ಲದೆ, ತನ್ನ ಹಳೆಯ ಆಭರಣಗಳನ್ನೂ ಗಂಡನಿಗೆ ಕೊಟ್ಟಳು.
ಮತ್ತೆಂದೂ ಅವಳು ಮನ ಬಂದಂತೆ ಹಣ ಖರ್ಚು ಮಾಡಲು ಹೋಗಲಿಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚಲಾರಂಭಿಸಿದಳು.

ಒಡೆದು ಹೋದ ಹಾಲಿಗಾಗಿ ಅತ್ತು ಪ್ರಯೋಜನವಿಲ್ಲ

ಒಡೆದುಹೋದ ಹಾಲು ಅಂದರೆ ಕೆಟ್ಟು ಹೋದ ಹಾಲು. ಕೆಟ್ಟು ಹೋದ ಹಾಲನ್ನು ಉಪಯೋಗಿಸಲು ಸಾಧ್ಯವಿಲ್ಲ. ಒಡೆದು ಹೋದ ಹಾಲು-ಚೆಲ್ಲಿ ಹೋದ ಹಾಲು ನಾವು ಬೇಕು ಅಂದುಕೊಂಡರೂ ಮತ್ತೆ ಸಿಗಲಾರದು. ಸಿಗದೆ ಇರುವುದಕ್ಕಾಗಿ ಅತ್ತು ಪ್ರಯೋಜನ ಉಂಟೇ? ಇಲ್ಲ, ಏಕೆಂದರೆ ಮತ್ತೆ ಅದು ಸಿಗುವುದೇ ಇಲ್ಲ, ಯಾವ ವಸ್ತುವೇ ಆಗಲಿ, ಕೆಟ್ಟು ಹೋದ ಮೇಲೆ ಮತ್ತೆ ಪ್ರಯೋಜನಕ್ಕೆ ಬರುವುದಿಲ್ಲ ಹಾಗಯೇ, ಕಳೆದು ಹೋದ ದಿನಗಳು ಮತ್ತ ಬರಲಾರವು. ನಿನ್ನಯ ದಿನ ನಿನ್ನೆಗ ಮುಗಿದುಹೋಯಿತು. ಕಳದುಹೋದ ದಿನಗಳಿಗಾಗಿ, ವ್ಯರ್ಥವಾದ ದಿನಗಳಿಗಾಗಿ ನಾವು ಅತ್ತು ಪ್ರಯೋಜನವಿಲ್ಲ ಎನ್ನುತ್ತದೆ ಈ ಗಾದೆ. 

ಗಾದೆಗೊಂದು ಕತೆ :

ಊಟ ಮಾಡಿ ಒಂದು ಪುಟ್ಟ ಪಟ್ಟಣದಲ್ಲಿ ಶ್ಯಾಮಿಲಿ ಎನ್ನುವ ಹುಡುಗಿ ಇದ್ದಳು. ಅವಳು ತಾತ- ಅಜ್ಜಿಯ ಜೊತೆಯಲ್ಲಿ ವಾಸಿಸುತ್ತಿದ್ದಳು. ದಿನನಿತ್ಯ ಗೆಳತಿಯರ ಜೊತೆಯಲ್ಲಿ ಶಾಲೆಗೆ ಹೋಗುತ್ತಿದ್ದಳು. ಮನೆಗೆ ಬಂದು ಸ್ವಲ್ಪವೂ ಓದುತ್ತಿರಲಿಲ್ಲ. ಶಾಲೆಯ ಕೆಲಸವನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಗೆಳತಿಯರ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದಳು. ರಾತ್ರಿಯಾಗುತ್ತಲೇ ಮಲಗಿಕೊಳ್ಳುತ್ತಿದ್ದಳು.

“ಶ್ಯಾಮಿಲಿ, ಶಾಲೆಯ ಕೆಲಸಗಳನ್ನೆಲ್ಲ ಮಾಡಿದೆಯಾ?” ಎಂದು ಅವಳ ತಾತ ಕೇಳುತ್ತಿದ್ದರು.
“ಎಲ್ಲವನ್ನೂ ನಾಳೆ ಮಾಡ್ತೀನಿ ತಾತ'' ಎನ್ನುತ್ತಿದ್ದಳು ಶ್ಯಾಮಿಲಿ. 
ಒಂದು ದಿನ ಆಕೆ ತಾತನ ಜೊತೆಯಲ್ಲಿ ಜಾತ್ರೆಗೆ ಹೋದಳು. ಜಾತ್ರೆಯಲ್ಲಿ ಬಗೆಬಗೆಯ ಆಟಿಕೆಗಳು, ಬಣ್ಣಬಣ್ಣದ ರಿಬ್ಬನ್‌ಗಳು, ಬಳೆಗಳು, ಮುತ್ತಿನ ಸರ ಮುಂತಾದವುಗಳನ್ನು ಕೊಂಡುಕೊಂಡಳು. ಸಂತೋಷ, ಸಂಭ್ರಮಗಳಿಂದ ಜಿಗಿಯುತ್ತಾ ಕುಣಿಯುತ್ತಾ ತಾತನೊಂದಿಗೆ ಮನೆಯ ಕಡೆಗೆ ಹೆಜ್ಜೆ ಹಾಕಿದಳು.
ತಾನು ಕೊಂಡುಕೊಂಡ ಸಾಮಾನುಗಳೆಲ್ಲವನ್ನೂ ಗೆಳತಿಯರಿಗೆ ತೋರಿಸುವ ತವಕ ಶ್ಯಾಮಿಲಿಗೆ ಮನೆಗೆ ಬಂದ ತಕ್ಷಣ ಗೆಳತಿಯರನ್ನು ಕಾಣಲು ಓಡಿದಳು.
ಶ್ಯಾಮಿಲಿಯು ತನ್ನ ಎಲ್ಲಾ ಗೆಳತಿಯರನ್ನೂ ತನ್ನ ಮನೆಗೆ ಕರೆದಳು. ತಾನು ತಂದ ಆಟದ ಸಾಮಾನುಗಳನ್ನು ಮನೆಯ ಅಂಗಳದಲ್ಲಿ ಹರಡಿದಳು. ಎಲ್ಲ ಗೆಳತಿಯರ ಶ್ಯಾಮಿಲಿಯ ಆಟಿಕೆಗಳನ್ನು ನೋಡಿದರು, ಮುಟ್ಟಿ, ತಡವಿ ಸಂತೋಷಪಟ್ಟರು. "ಶ್ಯಾಮಿಲಿ, ಬಹಳ ಚೆನ್ನಾಗಿದೆ ಕಣೇ!'' ಎಂದು ಹೇಳಿದರು.
ಶ್ಯಾಮಿಲಿಗೂ ಬಹಳ ಹಿಗ್ಗುಂಟಾಯಿತು. ಮುತ್ತಿನ ಸರ, ಗೊಂಬೆಗಳು ಮತ್ತು ಬಳೆಗಳನ್ನು ಕೈಯಲ್ಲಿ ಹಿಡಿದುಕೊಂಡು ಸಂಭ್ರಮದಿಂದ ಕುಣಿದಾಡತೊಡಗಿದಳು.
ಅಂಗಳದ ಪಕ್ಕದಲ್ಲಿಯೇ ಬೀದಿ ಇತ್ತು, ಬೀದಿಯಲ್ಲಿ ವಾಹನಗಳು ಓಡಾಡುತ್ತಿದ್ದವು. ಶ್ಯಾಮಿಲಿಯು ಓಡಿ ಕುಣಿದಾಡಿ ಸಂಭ್ರಮಿಸುತ್ತಿದ್ದಂತೆ ಗೊಂಬೆಗಳು, ಮುತ್ತಿನ ಸರಗಳು ಅವಳ ಕೈಯಿಂದ ಜಾರಿ ಬೀದಿಗೆ ಬಿದ್ದವು; ಚಲ್ಲಾಪಿಲ್ಲಿಯಾದವು. ವೇಗವಾಗಿ ಬಂದ ವಾಹನಗಳು ಅವುಗಳ ಮೇಲೆ ಹಾದುಹೋದವು.
ಶ್ಯಾಮಿಲಿಗೆ ದುಃಖ ತಡೆದುಕೊಳ್ಳಲಾಗಲಿಲ್ಲ. ಅವಳ ಗೊಂಬೆಗಳು, ಮುತ್ತಿನ ಸರದ ಮೇಲೆ ಕಾರು ಜೀಪುಗಳ ಚಿತ್ರಗಳು ಹಾದುಹೋಗಿದ್ದವು. ಸರದಲ್ಲಿದ್ದ ಮುತ್ತುಗಳು ಒಡೆದುಹೋಗಿದ್ದವು. ಗೊಂಬೆಗಳೂ ಚೂರು ಚೂರಾಗಿದ್ದವು.
ಶ್ಯಾಮಿಲಿಯು ಬೀದಿಯ ಬದಿಯಲ್ಲಿಯೇ ಅಳುತ್ತಾ ಕುಳಿತಳು., ಯಾರು ಕರೆದರೂ ಬರಲಿಲ್ಲ. “ನಂಗೆ ಅದೇ ಗೊಂಬೆ ಬೇಕು; ಅದೇ ಮುತ್ತಿನ ಹಾರ ಬೇಕು' ಎಂದು ಹೇಳುತ್ತಾ ಅಳುತ್ತಾ ಅಲ್ಲೇ ಕುಳಿತಳು. ಅವಳ ಗೆಳತಿಯರು ಒಬ್ಬೊಬ್ಬರಾಗಿ ಹೊರಟು ಹೋದರು.
ಅಜ್ಜಿಯೂ ಶ್ಯಾಮಿಲಿಯನ್ನು ಕರೆದಳು. ಆದರೂ, ಆಕೆ ಕುಳಿತಲ್ಲಿಂದ ಏಳಲಿಲ್ಲ, ಊಟ ಮಾಡಲು ಬರಲಿಲ್ಲ ಹಾಲು ಕುಡಿಯಲಿಲ್ಲ
“ನಂಗ ಅದೇ ಗೊಂಚ ಬೇಕು; ಅದೇ ಮುತ್ತಿನ ಸರ ಬೇಕು' ಎನ್ನುತ್ತಾ ಅಳುತ್ತಾ ಕುಳಿತಳು.
ಕೂನಗ, ಶ್ಯಾಮಿಲಿಯ ತಾತ ಬಂದರು. 
"ನೋಡು " ಶ್ಯಾಮಿಲಿ,
ಆ ಆಟಿಕೆಗಳು ಕೆಟ್ಟು ಹೋಗಿವೆ. ಕೆಟ್ಟು ಹೋದದ್ದಕ್ಕಾಗಿ ಅತ್ತು ಪ್ರಯೋಜನವಿಲ್ಲ. ಕೆಟ್ಟು ಹೋದ ಹಾಲಿಗಾಗಿ ಅತ್ತು ಪ್ರಯೋಜನವಿದೆಯೇ? ಅದನ್ನು ಕುಡಿಯಲು ಸಾಧ್ಯವೇ? ನಾವು ಸಂತೆಯಿಂದ ಹೊಸ ಆಟಿಕೆಗಳನ್ನು ತರೋಣ. ಆಗದೇ?'' ಎಂದು ಶ್ಯಾಮಿಲಿಯನ್ನು ಸಮಾಧಾನಪಡಿಸಿದರು.
ಶ್ಯಾಮಿಲಿ ಅಳು ನಿಲ್ಲಿಸಿದರೂ, ಸುಮ್ಮನೆ ಕುಳಿತೇ ಇದ್ದಳು. ಮೇಲೆ ಏಳಲೇ ಇಲ್ಲ
“ನೀನು ಈ ವರ್ಷ ಫೇಲ್ ಆಗಿ ಅಂತಿಟ್ಕಳೊಣ. ಆವಾಗೂ ನೀನು ಹೀಗೆ ಅಳ್ತಾ ಕೂತಿದ್ದೀಯಾ?” ಎಂದು ಕೇಳಿದರು ತಾತ.
“ನಾನು ಫೇಲ್ ಆಗೋದೇ ಇಲ್ಲ'' ಎಂದು ಮುಖ ದುಮ್ಮಿಸಿಕೊಂಡು ಹೇಳಿದಳು ಶ್ಯಾಮಿಲಿ.
“ ಅದು ಹೇಗೆ ಹೇಳಿಯಾ? ನೀನು ಸರಿಯಾಗಿ ಓದುವುದಿಲ್ಲ: ಹೋಂವರ್ಕ್ನ್ನು ಸರಿಯಾಗಿ ಮಾಡುವುದಿಲ್ಲ, ಹಾಗಾಗಿ, ಪರೀಕ್ಷೆಯಲ್ಲಿ ಬರೆಯಲೂ ನಿನಗೆ ಸಾಧ್ಯವಾಗುವುದಿಲ್ಲ; ಅಲ್ಲವೇ? ಹೀಗಾದರೆ ನೀನು ಫೇಲಾಗುತ್ತೀಯಾ. ನಿನ್ನ ಇಡೀ ವರ್ಷ ಸುಮ್ಮನೆ, ವ್ಯರ್ಥವಾಗಿ ಕಳೆದುಹೋಗುತ್ತದೆ. ಆಗಲೂ ಹೀಗೇ ಅಳುತ್ತಾ ಕುಳಿತಿದ್ದೀಯಾ?” ಎಂದು ಕೇಳಿದರು ತಾತ.
ತಾತ ಏನು ಹೇಳುತ್ತಿರುವರೆಂಬುದು ಶ್ಯಾಮಿಲಿಗೆ ಅರ್ಥವಾಯಿತು. ಹಾಳಾಗಿ ಹೋದ ಸಾಮಾನಿಗಾಗಿ ಅತ್ತು ಪ್ರಯೋಜನವಿಲ್ಲ ಎಂಬುದು ತಿಳಿಯಿತು. ಸಮಯವನ್ನು ವೃಥಾ ಹಾಳು ಮಾಡಿದರೆ ಪ್ರಯೋಜನವಿಲ್ಲ. ಕಳೆದು ಹೋದ ದಿನಗಳು.
ಮತ್ತೆ ಬರಲಾರವು. ತಾನು ಮುಂದಿನ ತರಗತಿಗೆ ಹೋಗಲಾರೆ ಎಂಬುದೂ ಗೊತ್ತಾಯಿತು.
ಅಂದಿನಿಂದ ಸುಮ್ಮಸುಮ್ಮನೆ ಹಟ ಮಾಡುವುದನ್ನು, ವೃಥಾ ಸಮಯ ಕಳೆಯುವುದನ್ನು ಶ್ಯಾಮಿಲಿ ಬಿಟ್ಟುಬಿಟ್ಟಳು. ಶಾಲೆಯ ಕೆಲಸಗಳನ್ನು ಸರಿಯಾಗಿ ಮಾಡತೊಡಗಿದಳು. ಒಳ್ಳೆಯ ಅಂಕಗಳನ್ನು ಪಡೆದುಕೊಂಡಳು. ಜಾಣೆ ಎನಿಸಿಕೊಂಡಳು.


 
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article